
ತೋಟಕ್ಕೆ ಕಾಡಾನೆ ಹಾವಳಿ… ಅಧಿಕಾರಿಗಳ ನಿರ್ಲಕ್ಷಕ್ಕೆ ಗ್ರಾಮಸ್ಥರ ಆಕ್ರೋಶ
ಆನಂದಪುರ: ಸಮೀಪದ ಆಚಾಪುರ ಗ್ರಾಮ ಪಂಚಾಯತಿಯ ಪತ್ರ ಹೊಂಡ ಗ್ರಾಮದಲ್ಲಿ ಅಡಕೆ ತೋಟಕ್ಕೆ ನುಗ್ಗಿದ ಆನೆಗಳು ಬೆಳೆಯನ್ನು ನಾಶಪಡಿಸಿದ ಘಟನೆ ಭಾನುವಾರ(ಡಿ.29) ರಾತ್ರಿ ನಡೆದಿದೆ.
ಪತ್ರ ಹೊಂಡ ಗ್ರಾಮದ ಗೀತಮ್ಮ ವೆಂಕಟಸ್ವಾಮಿ ಎಂಬುವರ ಅಡಿಕೆ ತೋಟಕ್ಕೆ ಕಾಡಾನೆಗಳು ಭಾನುವಾರ ರಾತ್ರಿ ದಾಳಿ ಮಾಡಿ ಅಡಿಕೆ, ಬಾಳೆ ಹಾಗೂ ತೆಂಗು ಬೆಳೆಗಳಿಗೆ ಹಾನಿ ಉಂಟುಮಾಡಿವೆ. ಇದರಿಂದ ಸುಮಾರು 30ಕ್ಕೂ ಹೆಚ್ಚು ಅಡಿಕೆ ಮರ, ತೆಂಗಿನ ಗಿಡ, ಹಾಗೂ ಬಾಳೆಯ ಗಿಡಗಳು ನಾಶವಾಗಿವೆ.
ಡಿಸೆಂಬರ್ ತಿಂಗಳ ಮೊದಲಿನಿಂದಲೂ ಗಿಳಾಲ್ ಗುಂಡಿ ಅರಣ್ಯ ಪ್ರದೇಶದ ತಂಗಳವಾಡಿ, ಕಣ್ಣೂರು, ಕಂಚಾಳಸರ, ಅಂಬ್ಲಿಗೋಳ, ಮೂಡಹಗಲು, ಲಕ್ಕವಳ್ಳಿ, ಕೆರೆ ಹಿತ್ಲು, ಈ ಭಾಗದಲ್ಲಿ ಆನೆಗಳು ನಿರಂತರವಾಗಿ ರೈತರ ಬೆಳೆಗೆ ಹಾನಿಗೊಳಿಸುತ್ತಿವೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಆನೆಗಳನ್ನು ಓಡಿಸುವಲ್ಲಿ ನಿರ್ಲಕ್ಷತನ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆಚಾಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಕಾಶ್ ತಂಗಳವಾಡಿ ಮಾತನಾಡಿ ಕಳೆದ ಒಂದು ತಿಂಗಳಿಂದ ಆನೆಗಳು ರೈತರ ಬೆಳೆಯನ್ನು ನಾಶಪಡಿಸಿದ್ದು ಅಲ್ಲದೆ ಆನೆಯ ವಿಚಾರದಲ್ಲಿ ಭಯಭೀತರಾದ ರೈತರು ಇನ್ನೂ ಹೆಚ್ಚಿನ ಆತಂಕ ಪಡುವಂತಾಗಿದೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಶಾಸಕರು ಭೇಟಿ ಕೊಟ್ಟಾಗ ಮಾತ್ರ ಅಧಿಕಾರಿಗಳು ಭೇಟಿ ನೀಡುತ್ತಾರೆ. ಆನೆಗಳನ್ನೂ ಓಡಿಸುವ ಕೆಲಸ ಅರಣ್ಯ ಇಲಾಖೆ ಮಾಡಬೇಕಾಗಿದೆ. ಕ್ಷೇತ್ರದ ಶಾಸಕರು ತಕ್ಷಣವೇ ಅರಣ್ಯ ಇಲಾಖೆಯವರಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.