
ಉಳ್ಳಾಲ: ಆಯತಪ್ಪಿ ಬಾವಿಗೆ ಬಿದ್ದ ಮೀನುಗಾರ; ಮೃತ್ಯು
ಉಳ್ಳಾಲ, ಜ.01 ಮೀನುಗಾರರೋರ್ವರು ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸೋಮೇಶ್ವರ ಉಚ್ಚಿಲ ಬೀಚ್ ಬಳಿ ಬುಧವಾರ ನಡೆದಿದೆ.
ಉಚ್ಚಿಲ ಬೀಚ್ ನಿವಾಸಿ ಶಶೀಂದ್ರ.ಎಮ್ ಉಚ್ಚಿಲ್ (74) ಮೃತ ದುರ್ದೈವಿ.
ಶಶೀಂದ್ರ ಅವರು ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದು, ಮಂಗಳವಾರ ಸಂಜೆ ಸ್ನೇಹಿತನೊಂದಿಗೆ ಬೀಚ್ ಬಳಿಯ ಪಾಳು ಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಅವರು ಆಯ ತಪ್ಪಿ ಬಾವಿಯೊಳಗೆ ತಲೆಕೆಳಗಾಗಿ ಬಿದ್ದಿದ್ದಾರೆ. ಬಾವಿಯೊಳಗೆ ಕೇವಲ ಮೂರಡಿಯಷ್ಟು ನೀರಿದ್ದ ಪರಿಣಾಮ ಶಶೀಂದ್ರ ಅವರ ತಲೆಗೆ ಗಂಭೀರ ಪೆಟ್ಟು ತಗುಲಿ ಕೊನೆಯುಸಿರೆಳೆದಿದ್ದಾರೆ.
ಸ್ಥಳೀಯರು ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.